ಕಲ್ಲು ಹೊಡೆದರೆ ಲೈಟ್ ಕಂಬಕ್ಕೆ ಹೊಡೆಯಬಾರದು. ಚಂದ್ರನಿಗೆ ಹೊಡೆಯಬೇಕು. ನಾನು ಸಹ `ಕಬ್ಜ` ಮೂಲಕ ಅದೇ ರೀತಿ ಪ್ರಯತ್ನಪಟ್ಟೆ. ನಾನು ನನ್ನದೇ ಹಣದಿಂದ ಪ್ರಯತ್ನಪಟ್ಟೆ. ಲ್ಯಾಂಡಿಂಗ್ ವೇಳೆ ಚಿಕ್ಕ ಕ್ರಾಶ್ ಆಯ್ತು. ಅದು ಸೋಲಲ್ಲ. ಮಿಕ್ಕಂತೆ ಎಲ್ಲವೂ ಸಕ್ಸಸ್ ಆಯಿತು. ಹಾಗಾಗಿದ್ದರಿಂದ ಇಂದು ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿ ಐದು ಸಿನಿಮಾಗಳನ್ನು ಘೋಷಿಸಿದ್ದೀನಿ. ನಾನು ಸಹ ದುಡ್ಡನ್ನು ರಿಯಲ್ ಎಸ್ಟೇಟ್ಗೆ ಹಾಕಬಹುದಿತ್ತು. ಆದರೆ, ದೇವರು ನನ್ನನ್ನು ಇಲ್ಲಿ ತಂದು ಹಾಕಿದ್ದಾರೆ, ಇಲ್ಲಿರು ಅಂತ. ಸಿನಿಮಾ ಮಾಡಿದರೆ, ಚಿತ್ರರಂಗದ ಎಲ್ಲಾ ವಲಯದವರು ಅದರಿಂದ ಊಟ ಮಾಡುತ್ತಾರೆ ಎಂದರು.
ಮೊದಲು ನಾವು ಎಲ್ಲರನ್ನು ಗೌರವಿಸುವುದನ್ನು ಕಲಿಯಬೇಕು ಎಂದ ಅವರು, ನಾವು ಒಳ್ಳೆಯ ಸಿನಿಮಾ ಮಾಡೋದಕ್ಕೆ ಪ್ರಯತ್ನ ಮಾಡೋಣ. ಮಾಡಿದ ಸಿನಿಮಾ ಎಲ್ಲಾ ದೊಡ್ಡ ಹಿಟ್ ಆಗುವುದಿಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾ ಸಹ ಫ್ಲಾಪ್ ಆಗುತ್ತದೆ. ನಮ್ಮದು ಸಹ ಸಣ್ಣ ಕ್ರಾಶ್ ಆಗಿರಬಹುದು. ಸರಕಾರಕ್ಕೆ ನಾನು 20 ಕೋಟಿ ಟ್ಯಾಕ್ಸ್ ಕಟ್ಟಿದ್ದೀನಿ. ಅದು ‘ಕಬ್ಜ’ದಿಂದ. ಇದನ್ನು ಯಾರೂ ಬಹಿರಂಗವಾಗಿ ಹೇಳುವುದಿಲ್ಲ. ನಾನು ಹೇಳುತ್ತೇನೆ. ಅದರಿಂದ ಎಷ್ಟು ಜನ ಊಟ ಮಾಡಿರುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಎಷ್ಟು ಜನ ಬದುಕಬಹುದು? ಇದೆಲ್ಲವನ್ನೂ ಯೋಚಿಸಬೇಕು. ಸುಮ್ಮನೆ ಏನೇನೋ ಮಾತನಾಡಬಾರದು’ ಎಂದು ಹೇಳಿದರು.
ಎಲ್ಲರೂ ಚಿತ್ರವನ್ನು ಗೆಲ್ಲಿಸಬೇಕು ಅಂತಲೇ ಮಾಡುತ್ತಾರೆ, ಸೋಲಬೇಕು ಅಂತ ಯಾರೂ ಮಾಡುವುದಿಲ್ಲ ಎಂದ ಚಂದ್ರು, ಕನ್ನಡ ನಿರ್ದೇಶಕರಿಗೆ ಅವಕಾಶ ಕೊಡಬೇಕು ಎಂದು ಈ ಸಂಸ್ಥೆ ಕಟ್ಟಿದ್ದೇನೆ. ನಾನು ಬೇರೆ ಯಾವುದೋ ಭಾಷೆಗೆ ಹೋಗಿ ಈ ಸಂಸ್ಥೆ ಶುರು ಮಾಡಿಲ್ಲ. ಬೆಂಗಳೂರಿನಲ್ಲಿ ನಿಂತು ಆರ್.ಸಿ. ಸ್ಟುಡಿಯೋಸ್ ಪ್ರಾರಂಭಿಸಿದ್ದೇನೆ. ಈ ಸಂಸ್ಥೆಯ ಮೂಲಕ ನಿರಂತರವಾಗಿ ಚಿತ್ರ ಮಾಡುತ್ತೇನೆ ಎಂದರು.